New study uses mathematical analysis of walking patterns for early detection of Parkinson’s disorder.

ಹಾವುಗಳ ನಡುವಿನ ಕಾಹುರತೆ: ಅರಿವು ಮತ್ತು ಮುನ್ನೆಚ್ಚರಿಕೆ ಅತ್ಯವಶ್ಯಕ!

Read time: 1 min 4 January, 2019 - 09:12

ಹಾವು… ಎಂದೊಡನೆ, ತಕ್ಷಣ ಭಯಭೀತರಾಗುವುದು ಸಹಜ. “ಎಲ್ಲಿ ನಮ್ಮನ್ನು ವಿಷವಿಕ್ಕಿ ಕಡಿಯುವುದೋ.. ಎಲ್ಲಿ ನಮ್ಮ ಮುಂದೆ ಬೆಚ್ಚಿ ಬೀಳಿಸುವಂತೆ ಹೆಡೆ ಎತ್ತಿ ನಿಲ್ಲುವುದೋ..” ಹೀಗೆ, ಎಷ್ಟೋ ತರಹದ ನಕಾರಾತ್ಮಕ, ಭಯಾನಕ ಯೋಚನೆಗಳು ನಮ್ಮ ಸೂಕ್ಷ್ಮ ಮನಸುಗಳ ಒಳಹೊಕ್ಕುವುದು ಆಶ್ಚರ್ಯವೇನಲ್ಲ. ಬಹುತೇಕ ಮಂದಿ ಭಾವಿಸಿರುವಂತೆ, ಪ್ರಪಂಚದಲ್ಲಿ ಕಾಣಸಿಗುವಂತಹ ಎಲ್ಲ ಹಾವುಗಳು ವಿಷಕಾರಿಯಲ್ಲ. ಹಾಗೆ ನೋಡಿದರೆ, ವಿಷಕಾರಿ ಹಾವುಗಳಿಗಿಂತ, ವಿಷರಹಿತ ಹಾವುಗಳ ಪ್ರಭೇದಗಳ ಸಂಖ್ಯೆಯೇ ಹೆಚ್ಚ್ಚು. ನಮ್ಮ ದೇಶದಲ್ಲಿಯೇ, ಈವರೆಗೆ ಸುಮಾರು ೨೭೫ ಹಾವಿನ ಪ್ರಭೇದಗಳಲ್ಲಿ, ಸುಮಾರು ೬೦ ಪ್ರಭೇದಗಳು ಮಾತ್ರ ವಿಷಕಾರಿ. ಆದರೆ, ಮೇಲ್ನೋಟಕ್ಕೆ ಒಂದೇ ತರಹ ಕಾಣುವ, ಗೊಂದಲ ಉಂಟು ಮಾಡುವ ವಿಷಕಾರಿ-ವಿಷರಹಿತ ಪ್ರಭೇದಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು, ಎರಡರ ನಡುವಿನ ಹೋಲಿಕೆಗಳು ಹಾಗೂ ವ್ಯತ್ಯಾಸಗಳ ಬಗ್ಗೆ ಅರಿತು, ಮುಂಜಾಗ್ರತೆ ವಹಿಸಬೇಕು. ಒಂದೇ ತರಹ ಕಾಣುವ, ವಿಷರಹಿತ “ತೋಳದ ಹಾವು” ಮತ್ತು ಮಾರಾಂತಿಕ ವಿಷಕಾರಿ “ಕಟ್ಟಿಗೆ ಹಾವಿನ” ಬಗ್ಗೆ ಒಂದು ಕಿರುಚಿತ್ರಣ, ಈ ಬೆಚ್ಚಿಬೀಳಿಸುವ ಕಥೆಯ ಮೂಲಕ...

ಭಾರತೀಯ ತೋಳದ ಹಾವು ಅಥವಾ ಆಂಗ್ಲ ಭಾಷೆಯಲ್ಲಿ ಸಾಮಾನ್ಯವಾಗಿ ಕರೆಯಲಾಗುವ “ಇಂಡಿಯನ್ ವುಲ್ಫ್ ಸ್ನೇಕ್”ಅನ್ನು ವೈಜ್ಞಾನಿಕವಾಗಿ ‘ಲೈಕೋಡಾನ್ ಆಲಿಕಸ್’ ಎಂದು ಕರೆಯಲಾಗುತ್ತದೆ. ಇದು ಮೇಲ್ನೋಟಕ್ಕೆ ನೋಡಲು, ಗಾಢ ಕಂದು ಅಥವಾ ಕೆಲವೊಮ್ಮೆ ಬೂದು-ಕಪ್ಪು ಬಣ್ಣದಲ್ಲಿರುತ್ತದೆ, ಮತ್ತು ಅದರ ಮೇಲೆ ಬಿಳಿಯ ತುಸು ದಪ್ಪಗಿನ ಪಟ್ಟೆಗಳು  ಪಟ್ಟೆಗಳು ಇರುತ್ತದೆ. ಇದು ವಿಷರಹಿತ ಹಾವು. ೬-೭ ವರುಷಗಳ ಹಿಂದೆ  ನಮ್ಮ ‘ಸಾಹಸೀ’ ಸ್ನೇಹಿತರೊಬ್ಬರು, ಈ ತೋಳದ ಹಾವನ್ನು ಹಿಡಿದೆನೆಂದು ಭಾವಿಸಿ, ಇದೇ ತರಹ ಕಾಣುವ, ಪ್ರಾಣಾಂತಿಕ ವಿಷಕಾರಿ ಕಟ್ಟಿಗೆ ಹಾವನ್ನು ಹಿಡಿದು, ಅದರಿಂದ ಕಡಿಸಿಕೊಂಡಿದ್ದರು! ಸ್ವಲ್ಪ ಹೊತ್ತಿನ ನಂತರ, ಚೆಹರೆಯ ಸ್ನಾಯುಗಳು ಬಿಗಿಯಾಗುವ, ಹಾಗೂ ಉಸಿರು ಕಟ್ಟುವ ಲಕ್ಷಣಗಳು ಕಾಣಿಸಿಕೊಂಡಾಗ, ತಾವು ಹಿಡಿದದ್ದು ಒಂದು ಕಟ್ಟಿಗೆ ಹಾವೆಂದು ಅವರಿಗೆ ಅರಿವಾಯಿತು. ಆಸ್ಪತ್ರೆಗೆ ಧಾವಿಸಿ, ಹಾವು ಕಡಿತದ ಪ್ರಥಮ ಚಿಕಿತ್ಸೆ ಪಡೆದರೂ, ಅಷ್ಟಾಗಿ ಫಲಕಾರಿಯಾಗಲಿಲ್ಲ. ನಂತರ, ಅವರನ್ನು ಒಂದು ದೊಡ್ಡ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಅವಿರತವಾದ ಚಿಕಿತ್ಸೆಗಳ ನಂತರ, ಅಪಾಯದಿಂದ ಪಾರಾಗಿ, ಈಗ ತನ್ನ ಈ ಸಾಹಸಿ ಕಥೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ, ತನ್ನ ವಿಶಿಷ್ಠ ಕಥಾನಾ ಶೈಲಿಯಲ್ಲಿ ಅವರೂ ನಕ್ಕಿ, ನಮ್ಮನ್ನೂ ‘ಬೆಚ್ಚಿಬೀಳಿಸುತ್ತಾ’ ನಗಿಸುತ್ತಾರೆ!

ಕಟ್ಟಿಗೆ ಹಾವು ನಮ್ಮ ದೇಶದಲ್ಲಿ ಕಾಣಸಿಗುವ ವಿಷಕಾರಿ “Big 4”ನ ಒಂದು ಸದಸ್ಯ. ಈ ‘ಬಿಗ್ ೪’ ಎನ್ನುವುದು, ಅಪಾಯಕಾರಿ ನಾಗರಹಾವು (ಇಂಡಿಯನ್ ಕೋಬ್ರಾ), ಕಾಳಿಂಗ ಸರ್ಪ (ಕಿಂಗ್ ಕೋಬ್ರಾ), ರಸ್ಸೆಲಿನ ಮಂಡಲ (ರಸ್ಸಲ್ಸ್ ವೈಪರ್) ಮತ್ತು ಕಟ್ಟಿಗೆ (ಕಾಮನ್ ಕ್ರೈಟ್) ಹಾವುಗಳ ಒಂದು ಗುಂಪು. ಈ ಪೈಕಿ, ನಾಗರಹಾವು, ರಸ್ಸೆಲಿನ ಮಂಡಲ ಹಾಗೂ ಕಟ್ಟಿಗೆ ಹಾವು ಎಲ್ಲೆಡೆ- ಅಂದರೆ, ನಗರಗಳಲ್ಲಿ ದಟ್ಟ ಪೊದೆಗಳ ಹತ್ತಿರ, ಹಳ್ಳಿಗಳಲ್ಲಿ, ತೋಟ-ಗದ್ದೆಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಾಳಿಂಗ ಸರ್ಪ ಪಶ್ಚಿಮ ಘಟ್ಟಗಳ ಸ್ಥಳೀಯ ಪ್ರಭೇದ. ಹಾಗಾಗಿ, ಪಶ್ಚಿಮ ಘಟ್ಟಗಳ ದಟ್ಟ ಕಾನನಗಳ ಮಧ್ಯೆ, ಹಾಗೂ ಕೆಲವೊಮ್ಮೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ-ತೋಟಗಳಲ್ಲಿ ಕಾಣಸಿಗುತ್ತದೆ.

ಕಟ್ಟಿಗೆ ಹಾವಿನ ವೈಜ್ಞಾನಿಕ ನಾಮ “ಬಂಗಾರಸ್ ಸೇರುಲೆಯಸ್”. ಇದು ಒಂದು ನಿಶಾಚರಿ ಪ್ರಭೇದ. ಹಗಲು ಹೊತ್ತಿನಲ್ಲಿ ಇದು ಒಂದು ರೀತಿ ನಿಧಾನಗತಿಯಲ್ಲಿ ಚಲಿಸುತ್ತದೆ, ಮತ್ತು ಅಷ್ಟು ಸಕ್ರಿಯವಾಗಿ ಇರುವುದಿಲ್ಲ. ಇದು ನೋಡಲು ಗಾಢ ನೀಲಿ, ಅಥವಾ ಕಪ್ಪು ಬಣ್ಣವಿರುತ್ತದೆ. ಮೈಮೇಲೆ ಬಿಳಿಯ ಪಟ್ಟೆಗಳು ಜೋಡಿಗಳಲ್ಲಿ ವ್ಯವಸ್ಥಿತವಾಗಿರುತ್ತದೆ. ತೋಳದ ಹಾವು ಮತ್ತು ಕಟ್ಟಿಗೆ ಹಾವಿನ ಮಧ್ಯೆ ಇರುವ ಪ್ರಮುಖ ವ್ಯತ್ಯಾಸಗಳು -

  • ತೋಳದ ಹಾವಿನ ವಯಸ್ಕ ಹಾವು ಕೇವಲ ೨-೩ ಅಡಿಗಳವರೆಗೆ ಬೆಳೆಯುತ್ತದೆ. ಆದರೆ, ಕಟ್ಟಿಗೆ ಹಾವು ಸುಮಾರು ೫-೬ ಅಡಿಗಳವರೆಗೆ ಬೆಳೆಯುತ್ತದೆ. ಆದರೆ, ಕಟ್ಟಿಗೆ ಹಾವುಗಳ ಎಳೆವೆ ಹಾವುಗಳು ಸಹ ಸುಮಾರು ೨ ರಿಂದ ೨. ಅಡಿಗಳವರೆಗೆ ಇರುತ್ತದೆ.
  • ತೋಳದ ಹಾವುಗಳ ಮೇಲೆ ಪಟ್ಟೆಗಳು ಜೋಡಿಗಳಲ್ಲಿ ಇರುವುದಿಲ್ಲ, ಸಮಾನ ಅಂತರದಲ್ಲಿ ಒಂದೊಂದು ಇರುತ್ತದೆ, ಮತ್ತು ಸ್ವಲ್ಪ ದಪ್ಪಗೆ ಇರುತ್ತದೆ. ಆದರೆ, ಕಟ್ಟಿಗೆ ಹಾವುಗಳಲ್ಲಿ,  ಬಿಳಿಯ ಪಟ್ಟೆಗಳು,  ಜೋಡಿಗಲ್ಲಿ ಕಾಣಿಸಿಕೊಳ್ಳುತ್ತವೆ, ಮತ್ತು ಈ ಪಟ್ಟೆಗಳು ಅಷ್ಟು  ದಪ್ಪಗಿರುವುದಿಲ್ಲ. ಕೆಲವಾರು ಕಟ್ಟಿಗೆ ಹಾವುಗಳಲ್ಲಿ ಮಾತ್ರ ಈ ಪಟ್ಟೆಗಳು ಮಧ್ಯದಲ್ಲಿ ಜೋಡಿಗಳಲ್ಲಿ ಕಾಣಿಸಿಕೊಳ್ಳುತ್ತವೆ, ಮತ್ತು ಮುಂಭಾಗ-ಹಿಂಭಾಗದಲ್ಲಿ ಸ್ವಲ್ಪ ದಪ್ಪಗಿನ ಒಂದೊಂದು ಪಟ್ಟೆ ಇರಬಹುದು.
  • ತೋಳದ ಹಾವುಗಳ ತಲೆಯ ಭಾಗದಲ್ಲಿ, “ಲೊರೆಯಲ್ ಶೀಲ್ಡ್” ಎನ್ನುವ ಅಂಗದ ಉಪಸ್ಥಿತಿ ಇರುತ್ತದೆ. ಆದರೆ, ಕಟ್ಟಿಗೆ ಹಾವುಗಳಲ್ಲಿ ಈ ಅಂಗದ ಉಪಸ್ಥಿತಿ ಇರುವುದಿಲ್ಲ.
  • ತೋಳದ ಹಾವುಗಳಲ್ಲಿ ಮಾಪಕಗಳು ಎಲ್ಲೆಡೆ ಏಕಪ್ರಕಾರದಲ್ಲಿ ಇರುತ್ತದೆ. ಆದರೆ ಕಟ್ಟಿಗೆ ಹಾವುಗಳ ಮೇಲ್ಭಾಗದಲ್ಲಿ, ಮಾಪಕಗಳು ಸ್ವಲ್ಪ ದೊಡ್ಡದಾಗಿ, ಷಡ್ಭುಜೀಯ ಆಕಾರದಲ್ಲಿ ಇರುತ್ತವೆ.
  • ಕೊನೆಯದಾಗಿ, ತೋಳದ ಹಾವುಗಳು ವಿಷಕಾರಿ ಅಲ್ಲ. ತೋಳದ ಹಾವುಗಳನ್ನೇ ಕಟ್ಟಿಗೆ ಹಾವುಗಳೆಂದು ಭಾವಿಸಿ ಅವುಗಳನ್ನು ಹೊಡೆದು ಹಾಕುವ ಪ್ರಕರಣಗಳು ಅಧಿಕ. ಆದರೆ, ಕಟ್ಟಿಗೆ ಹಾವುಗಳು ವಿಷಪೂರಿತ. ಇದರ ತಲೆ ಸ್ವಲ್ಪ ತ್ರಿಕೋನಾಕಾರದಲ್ಲಿ ಇರುತ್ತದೆ. ಇದು ಕಡಿದರೂ, ಸೊಳ್ಳೆ ಕಚ್ಚಿದಂತೆ ಇರುತ್ತದೆ, ಅಥವಾ ಏನೂ ಗೊತ್ತಾಗದೇ ಇರಬಹುದು. ಕಟ್ಟಿಗೆ ಹಾವಿನ ವಿಷ ನರಮಂಡಲನಾಶಕ. ವಿಷವು ಪೂರ್ತಿಯಾಗಿ ಇಂಗಿತವಾಗಿ ಮನುಷ್ಯನ ಪ್ರಾಣ ಹೋಗಲು ವಯಸ್ಕರಲ್ಲಿ ಕನಿಷ್ಠ ೫-೮ ತಾಸುಗಳು ಬೇಕಾಗಬಹುದು. ಆದ್ದರಿಂದ, ಹಾವು ಕಡಿತವಾದಲ್ಲಿ, ಪ್ರಾಣಾಪಾಯದಿಂದ ಪಾರಾಗಲು ತಕ್ಷಣವೇ ಪ್ರಥಮ ಚಿಕಿತ್ಸೆ ಪಡೆದು, ನಂತರ ಮುಂದಿನ ಚಿಕಿತ್ಸೆಗಳನ್ನು ಪಡೆಯಬೇಕು. ಹಾಗೆಯೇ, ಒಂದು ವೇಳೆ ನಿದ್ದೆಯಲ್ಲಿರುವಾಗ ಕಡಿತವಾದರೆ, ಅರಿವಿಗೆ ಬಾರದ ಕಾರಣ, ಅನಾಹುತಕ್ಕೊಳಗಾದವರು ಏಳದೆಯೇ, ನಿದ್ರೆಯಲ್ಲಿಯೇ ಅಸ್ತಂಗತರಾಗಬಹುದು.

ಆದ್ದರಿಂದ, ಈ ಎರಡೂ ಹಾವುಗಳ ಬಗೆಗಿನ ಹೋಲಿಕೆಗಳು ಹಾಗೂ ವ್ಯತ್ಯಾಸಗಳ ಆಳವಾದ ಅರಿವು ಅವಶ್ಯಕ. ನಿಮ್ಮ ಸುತ್ತ ಮುತ್ತ ಈ ಹಾವುಗಳಲ್ಲಿ ಒಂದನ್ನಾದರೂ ಕಂಡರೆ, ದೂರ ಸರಿಯಿರಿ ಹಾಗೂ ಸರೀಸೃಪ ತಜ್ಞರಿಗೆ / ರಕ್ಷಣಾ ಪಡೆಗೆ ತಕ್ಷಣ ಕರೆ ನೀಡಿರಿ. ಇತರರೊಂದಿಗೆ ಮಾಹಿತಿ ಹಂಚಿಕೊಳ್ಳಿ.