ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಋತುವಿನ ಆಗಮನದ ಮುನ್ನವೇ ಮುಂಗಾರಿನ ಮುನ್ಸೂಚನೆ ಹೇಗೆ ಸಾಧ್ಯ?

Read time: 1 min
ಪುಣೆ
17 Apr 2018
Photo : Purabi Deshpande / Research Matters

ಕಳೆದ ವಾರ, ಭಾರತೀಯ ಹವಾಮಾನ ಇಲಾಖೆಯು, ಈ ವರ್ಷದ ಮುಂಗಾರು ಸಾಮಾನ್ಯವಾಗಿರುತ್ತದೆ ಎಂದು ಊಹಿಸಿದೆ. ಆದರೆ ನಾವಿನ್ನೂ ಬೇಸಿಗೆಯ ತಿಂಗಳುಗಳಲ್ಲಿಯೇ ಇದ್ದೇವಲ್ಲವೇ? ನಮ್ಮ ರೈತರು ಬೀಜಗಳನ್ನು ಬಿತ್ತನೆ ಮಾಡಲು ಮತ್ತು ತಮ್ಮ ನೀರಾವರಿ ಸಂಪನ್ಮೂಲಗಳನ್ನು ಸನ್ನದ್ಧವಾಗಿಸಿಕೊಳ್ಳಲು, ನಾಗರಿಕ ಸೇವಾ ಅಧಿಕಾರಿಗಳು ಗೃಹಬಳಕೆ ಮತ್ತು ಕೈಗಾರಿಕಾ ಬಳಕೆಗಾಗಿ ನೀರಿನ ವಿತರಣೆಯನ್ನು ಯೋಜಿಸಲು ಈ ಮಾಹಿತಿ ಬೇಕು, ನಿಜ; ಆದರೆ ಸಮಯಕ್ಕೆ ಮುಂಚಿತವಾಗಿ ಈ ನಿಖರ ಊಹೆಯನ್ನು ಇಲಾಖೆಯ ವಿಜ್ಞಾನಿಗಳು ಹೇಗೆ ಮಾಡಿದರು? ಮುಂಗಾರಿನ ಮೇಲೆ ನಮ್ಮ ದೇಶದ ಹೆಚ್ಚಿನ ಜನರು ಅವಲಂಬಿತರಾಗಿರುವ ಕಾರಣ, ಅದರ ಆಗಮನದ ಊಹೆಯನ್ನು ನಿಖರವಾಗಿ ಮಾಡುವ ಕಲೆಯಲ್ಲಿ ವಿಜ್ಞಾನಿಗಳು ಪರಿಪೂರ್ಣರಾಗುವುದು ಅತ್ಯಾವಶ್ಯಕ. 'ನೇಚರ್' ನಿಯತಕಾಲಿಕೆಯಲ್ಲಿ ಪ್ರಕಟವಾದ ವೈಜ್ಞಾನಿಕ ವರದಿಯ ಪ್ರಕಾರ, ವಿಜ್ಞಾನಿಗಳ ಸಹಕಾರದಿಂದ ಇದೀಗ ಮೂರು ತಿಂಗಳು ಮುಂಚಿತವಾಗಿಯೇ ಮುಂಗಾರಿನ ಆಗಮನವನ್ನು ಊಹಿಸಬಹುದಾಗಿದೆ.

ಇಂದಿನವರೆಗೂ, ಭಾರತೀಯ ಹವಾಮಾನ ಇಲಾಖೆಯು ಮುಂಗಾರಿನ ಆಗಮನಕ್ಕೆ ಹದಿನೈದು ದಿನಗಳು ಮುಂಚಿತವಾಗಿ ಮುನ್ಸೂಚನೆಯನ್ನು ನೀಡುತ್ತಿತ್ತು. ಆದರೆ, ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು ಅಥವಾ ನೀರಿನ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಯೋಜಿಸಲು, ಹದಿನೈದೇ ದಿನಗಳ ಸಮಯ ಸಾಕಾಗುತ್ತಿರಲಿಲ್ಲ. ಅದಕ್ಕಾಗಿಯೇ, ಭಾರತೀಯ ಉಷ್ಣವಲಯದ ಹವಾಮಾನ ವಿಜ್ಞಾನ ಸಂಸ್ಥೆಯ  ಸಂಶೋಧಕರು, ಈ ಸಮಸ್ಯೆಯನ್ನು ಬಗೆಹರಿಸುವ ಅತ್ಯುತ್ತಮ ಮಾರ್ಗದ ಬಗ್ಗೆ ಯೋಚಿಸುತ್ತಾ ಕಾರ್ಯತತ್ಪರರಾದರು. ಇದರ ಫಲವಾಗಿ, ಈಗ ಋತುಮಾನದ ಮುನ್ಸೂಚನೆಯನ್ನು ಒಂದು ಋತುವಿನಷ್ಟು ಮುಂಚಿತವಾಗಿಯೇ ತಿಳಿಸುವ ವಿಧಾನವನ್ನು ರೂಪಿಸಿದ್ದಾರೆ.

ಮುಂಗಾರಿನ ಆಗಮನವು ತನ್ನದೇ ರೀತಿಯಲ್ಲಿ ವಿಶಿಷ್ಟ ಮತ್ತು ಗಮನಿಸದೇ ಇರಲು ಸಾಧ್ಯವೇ ಇಲ್ಲದಂತಹ ಸೂಚನೆಗಳನ್ನು ನೀಡುವ, ಅದ್ಭುತ ಪ್ರಕ್ರಿಯೆ. ಮಳೆಗಾಲವು ಕೇರಳಕ್ಕೆ ಆಗಮಿಸುವ ಮೊದಲು ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ ಮತ್ತು ಭಾರತೀಯ ಪರ್ಯಾಯದ್ವೀಪದ ವಾತಾವರಣದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳು ಉಂಟಾಗುತ್ತವೆ. ಮಳೆಗಾಲ ಪ್ರಾರಂಭಕ್ಕೂ ಕೆಲವೇ ದಿನಗಳ ಮುಂಚೆ ಮಳೆ, ಮಾರುತ ಮತ್ತು ವಿಕಿರಣಗಳನ್ನು ಒಳಗೊಂಡಂತೆ ವಾತಾವರಣದಲ್ಲಿ ಆದ ಈ ಬದಲಾವಣೆಗಳನ್ನು, ಹವಾಮಾನ ಶಾಸ್ತ್ರಜ್ಞರು ಅಧ್ಯಯನ ಮಾಡುತ್ತಾರೆ.

"ಪ್ರಸ್ತುತ ಬಳಕೆಯಲ್ಲಿರುವ ಕ್ರಿಯಾತ್ಮಕ ಮುನ್ಸೂಚನಾ ವ್ಯವಸ್ಥೆಯು, ಮುಂಗಾರಿನ ಆಗಮನದ ದಿನಾಂಕವನ್ನು ೨ - ೩ ವಾರಗಳ ಮುಂಚಿತವಾಗಿ ಊಹಿಸುವ ಮಿತಿಯನ್ನು ಹೊಂದಿದೆ. ಆದರೆ, ಫೆಬ್ರವರಿ ತಿಂಗಳಿನಲ್ಲಿಯೇ, ವಾತಾವರಣ ಮತ್ತು ಸಾಗರದ ಪರಿಸ್ಥಿತಿಗಳ ಆಧಾರದ ಮೇಲೆ, ಮುಂಗಾರಿನ ಮುಂಚಿತವಾದ ಅಥವಾ ವಿಳಂಬವಾದ ಆಗಮನವನ್ನು ಊಹಿಸಲು, ಜಾಗತಿಕ ಕಾಲೋಚಿತ ಮುನ್ಸೂಚನಾ ಮಾದರಿಯನ್ನು (CFS v.2) ಬಳಸಲು  ಸಾಧ್ಯ ಎಂಬುದನ್ನು ಪ್ರತಿಪಾದಿಸುವುದೇ ನಮ್ಮ ಅಧ್ಯಯನದ ಪ್ರಾಥಮಿಕ ಉದ್ದೇಶ" ಎನ್ನುತ್ತಾರೆ ಭಾರತೀಯ ಉಷ್ಣವಲಯದ ಹವಾಮಾನವಿಜ್ಞಾನ ಸಂಸ್ಥೆಯ  ವಿಜ್ಞಾನಿ ಹಾಗೂ ಈ ಅಧ್ಯಯನದ ಲೇಖಕ ಶ್ರೀ ಮಹೇಶ್ವರ್ ಪ್ರಧಾನ್.

ಭಾರತದಲ್ಲಿ  ಮಳೆಗಾಲವು ವಾತಾವರಣದ ಬದಲಾವಣೆಗಳ ಮೇಲೆ ಮಾತ್ರವಲ್ಲದೇ, ಎಲ್ ನಿನೋ ದಕ್ಷಿಣ ಆಸಿಲೇಶನ್ಸ್, ಹಿಂದೂ ಮಹಾಸಾಗರ ದ್ವಿಧ್ರುವಿ ವಿದ್ಯಮಾನ, ಉತ್ತರ ಅಟ್ಲಾಂಟಿಕ್ ಆಸಿಲೇಶನ್ಸ್ ಮತ್ತು ಪೆಸಿಫಿಕ್ ದಶವಾರ್ಷಿಕ ಆಸಿಲೇಶನ್ಸ್ಗಳಂತಹ ಜಾಗತಿಕ ಹವಾಮಾನ ವಿದ್ಯಮಾನಗಳ ಮೇಲೆ ಅವಲಂಬಿತವಾಗಿದೆ. ಇವು ಹವಾಮಾನ ಬದಲಾವಣೆಯ ವಿಶಿಷ್ಟ ಮಾದರಿಗಳಾಗಿದ್ದು, ತುಲನಾತ್ಮಕವಾಗಿ ದೀರ್ಘಾವಧಿಯ ನಂತರ ಪುನರಾವರ್ತಿಸುತ್ತವೆ. ಹವಾಮಾನ ಮುನ್ಸೂಚನೆಗಾಗಿ ಬಳಸಲ್ಪಡುವ ಕಂಪ್ಯೂಟರ್ ಆಧಾರಿತ ಹವಾಮಾನ ಮಾದರಿಗಳಾದ 'ಜಾಗತಿಕ ಪ್ರಸರಣ ಮಾದರಿ'ಗಳನ್ನು ಬಳಸುವ ಮೂಲಕ, ಸಂಶೋಧಕರು ಈ ಎಲ್ಲಾ ಜಾಗತಿಕ ಹವಾಮಾನ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಒಂದು ಕುತೂಹಲಕಾರಿ ಅಂಶವೆಂದರೆ,  ಮಳೆಗಾಲವು ಕೇರಳದಲ್ಲಿ ಆಗಮಿಸಿದಾಗ, ಭಾರತೀಯ ಪರ್ಯಾಯದ್ವೀಪದ ಮೇಲಿನ ಉಷ್ಣಾಂಶವು, ಹಿಂದೂ ಮಹಾಸಾಗರದ ಮೇಲಿನ ಉಷ್ಣಾಂಶಕ್ಕಿಂತ ಹೆಚ್ಚಿನದ್ದಾಗಿರುತ್ತದೆ. ಇತರ ಸಮಯಗಳಲ್ಲಿ, ಭಾರತೀಯ ಪರ್ಯಾಯದ್ವೀಪದ ಮೇಲೆ ಉಷ್ಣತೆಯು ಸಮುದ್ರದ ಮೇಲೆ ಉಷ್ಣಾಂಶಕ್ಕಿಂತ ಕಡಿಮೆಯಿರುತ್ತದೆ. ಸಂಶೋಧಕರು ಮುಂಗಾರಿನ ಮುನ್ಸೂಚನೆಗಾಗಿ 'ಉಷ್ಣಾಂಶದ ವಿಲೋಮತೆ' ಎಂಬ ಈ ವಿದ್ಯಮಾನವನ್ನು ತಮ್ಮ ಸಂಶೋಧನಾ ಮಾದರಿಗಳಲ್ಲಿ ಬಳಸಿದ್ದಾರೆ.

ಈ ಅಧ್ಯಯನದಲ್ಲಿ ಸಂಶೋಧಕರು, ಅಮೆರಿಕಾದ ರಾಷ್ಟ್ರೀಯ ವಾತಾವರಣ ಸಂಶೋಧನಾ ಕೇಂದ್ರ ಮತ್ತು ರಾಷ್ಟ್ರೀಯ ಪರಿಸರ ಮುನ್ಸೂಚನಾ ಕೇಂದ್ರಗಳ ದತ್ತಾಂಶವನ್ನು ಬಳಸಿದರು; ೨೬ ವರ್ಷಗಳ ಅವಧಿಯಲ್ಲಿ (೧೯೮೨ ರಿಂದ ೨೦೦೮ ರವರೆಗೆ) ಮುಂಗಾರಿನ ಆರಂಭದ ದಿನಾಂಕದ ಬಗ್ಗೆ ತಮ್ಮ ನಿಖರವಾದ ಊಹೆಯನ್ನು, ಭಾರತೀಯ ಹವಾಮಾನ ಸಂಸ್ಥೆಯ ದತ್ತಾಂಶದಲ್ಲಿನ ನಿಜವಾದ ದಿನಾಂಕದೊಂದಿಗೆ ತಾಳೆ ಹಾಕಿದರು.

ಈ ಅಧ್ಯಯನಗಳು ಊಹಿಸಿದ ಮುಂಗಾರಿನ ಆಗಮನದ ಸರಾಸರಿ ದಿನಾಂಕ ಮೇ ೩೦ ಎಂದಿದ್ದರೆ, ಭಾರತೀಯ ಹವಾಮಾನ ಸಂಸ್ಥೆಯ ಸರಾಸರಿ ದಿನಾಂಕವು ಜೂನ್ ೨ ಎಂದಾಗಿತ್ತು. ಮತ್ತೂ ಹೆಚ್ಚು ಕುತೂಹಲಕಾರಿಯಾದ ಅಂಶವೆಂದರೆ, ಈ ಹೊಸ ಮಾದರಿಯು ಮುಂಗಾರಿನ ಆಗಮನದಲ್ಲಿ ಆಗಬಹುದಾದ ವ್ಯತ್ಯಾಸವನ್ನು ಗಮನಾರ್ಹ ನಿಖರತೆಯೊಂದಿಗೆ ಪ್ರಸ್ತುತಪಡಿಸಿತ್ತು. "ಈ ಮಾದರಿಯ ಮುನ್ಸೂಚನೆಯು ಉತ್ತಮವಾಗಿದ್ದು, ಮುಂಗಾರಿನ ಮುಂಚಿತ ಅಥವಾ ವಿಳಂಬವಾದ ಆಗಮನವನ್ನು ಶೇಖಡ ೬೦ - ೭೦ರಷ್ಟು ನಿಖರವಾಗಿ ತಿಳಿಸುತ್ತದೆ. ಅಂದರೆ, ೧೦ ವರ್ಷಗಳಲ್ಲಿ, ೬ - ೭ ಮಳೆಗಾಲವನ್ನು ಅತ್ಯಂತ ನಿಖರವಾಗಿ ಮುಂಚಿತವಾಗಿಯೇ ತಿಳಿಯಪಡಿಸುತ್ತದೆ." ಎನ್ನುತ್ತಾರೆ ಶ್ರೀ ಪ್ರಧಾನ್.

ಜಾಗತಿಕವಾಗಿ ಸಮುದ್ರದ ಮೇಲ್ಮೈ ತಾಪಮಾನವು, ಭಾರತದಲ್ಲಿ ಮುಂಗಾರಿನ ಆಗಮನದ ಮೇಲೆ, ಗಣನೀಯ ಪ್ರಮಾಣದ ಪ್ರಭಾವವನ್ನು ಬೀರುತ್ತದೆ ಎಂದೂ ಸಂಶೋಧಕರು ಗಮನಿಸಿದರು; ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮೇಲೆ ತಾಪಮಾನವು ಹೆಚ್ಚಿದಾಗ, ಭಾರತದಲ್ಲಿ ಮುಂಗಾರು ವಿಳಂಬವಾಗುತ್ತದೆ ಎಂಬುದನ್ನೂ ಕಂಡುಕೊಂಡರು.

ಶ್ರೀ ಪ್ರಧಾನ್ ಅವರ ಪ್ರಕಾರ, ಅವರ ತಂಡದ ಸಂಶೋಧಕರು, ಪ್ರಸ್ತುತ ಮುಂಗಾರಿನ ಆಗಮನದಲ್ಲಿ ಆಗಬಹುದಾದ ವ್ಯತ್ಯಾಸವನ್ನು ಗುರುತಿಸಲು, ಹೆಚ್ಚಾಗಿ ಎಲ್-ನಿನೊ ಮತ್ತು ದಕ್ಷಿಣ ಆಸಿಲೇಶನ್ಸ್ ಮೇಲೆ ಅವಲಂಬಿತರಾಗಿದ್ದಾರೆ; ಇಂತಹ ಮತ್ತೂ ಹೆಚ್ಚು ನಿಯತಾಂಕಗಳನ್ನು ಈ ಮಾದರಿಯಲ್ಲಿ ಸೇರ್ಪಡೆಗೊಳಿಸಿದರೆ, ಈ ಮುನ್ಸೂಚನಾ ಮಾದರಿಯ ನಿಖರತೆಯನ್ನು ಸುಧಾರಿಸುವುದು ಸಾಧ್ಯ. ಇದೇ ನಿಟ್ಟಿನಲ್ಲಿ ಸಂಶೋಧಕರು ಕಾರ್ಯಪ್ರವೃತ್ತರಾಗಿದ್ದಾರೆ.