ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಕಿವುಡನ್ನು ಕೇಳಿಸಿಕೊಂಡವರು! - ಕಿವುಡುತನಕ್ಕೆ ಸ್ಮಾರ್ಟ್ಫೋನ್ ಆಧಾರಿತ ಚಿಕಿತ್ಸೆ ಮತ್ತು ಶ್ರವಣ ಸಾಧನ ರೂಪಿಸಿದ ಐಐಎಸ್ಸಿ ಸಂಶೋಧಕರು

Read time: 1 min
ಬೆಂಗಳೂರು
29 ಮೇ 2019
ಕಿವುಡನ್ನು ಕೇಳಿಸಿಕೊಂಡವರು! - ಕಿವುಡುತನಕ್ಕೆ ಸ್ಮಾರ್ಟ್ಫೋನ್ ಆಧಾರಿತ ಚಿಕಿತ್ಸೆ ಮತ್ತು ಶ್ರವಣ ಸಾಧನ ರೂಪಿಸಿದ ಐಐಎಸ್ಸಿ ಸಂಶೋಧಕರು

ಜಾಗತಿಕವಾಗಿ, ಹುಟ್ಟಿದ ನಂತರ ಕಿವುಡುತನದ ಪರೀಕ್ಷೆಗೆ ಒಳಪಡುವ ಪ್ರತಿ 1000 ಹಸುಗೂಸುಗಳಲ್ಲಿ 6 ಮಕ್ಕಳು ಕಿವುಡುತನದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಮತ್ತು ಅವರಲ್ಲಿ  200ಕ್ಕಿಂತಲೂ ಕಡಿಮೆ ಮಕ್ಕಳಿಗೆ ಮಾತ್ರ ವಾಕ್ ಚಿಕಿತ್ಸಕರು ಲಭ್ಯವಿದ್ದಾರೆ. ಭಾರತದಂತಹ ದೇಶಗಳಲ್ಲೂ ಪರಿಸ್ಥಿತಿ ಕೆಟ್ಟದಾಗಿದ್ದು, ಬಡತನದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುತ್ತದೆ  ಮತ್ತು ಆರೋಗ್ಯ ಸೇವೆಗಳು ಅಷ್ಟು ಸುಲಭವಾಗಿ ಲಭ್ಯವಿರುವುದಿಲ್ಲ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, ಭಾರತೀಯ ಸನ್ನಿವೇಶದಲ್ಲಿ ವಿಶೇಷವಾಗಿ ಉಪಯುಕ್ತವಾಗುವ ಒಂದು ಶ್ರವಣ ಸಾಧನವನ್ನು ರೂಪಿಸಿದ್ದಾರೆ. ಐಇಇಇ ಗ್ಲೋಬಲ್ ಹ್ಯುಮಾನಿಟೇರಿಯನ್ ಟೆಕ್ನಾಲಜಿ ಕಾನ್ಫರೆನ್ಸ್ನ ಫಲಶೃತಿಯಾದ ಪ್ರಕಟಣೆಯ ಭಾಗವಾಗಿದ್ದ ಈ ಅಧ್ಯಯನವು, ಐಐಎಸ್ಸಿಯಲ್ಲಿ ನಡೆದ ಒಂದು ಪಠ್ಯಕ್ರಮ ಯೋಜನೆ ಮತ್ತು ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಡಾ. ರಮೇಶ್ ಎ. ಮತ್ತು ಶ್ರೀಮತಿ ಲಿಟ್ಟಿನಾ ಜಾರ್ಜ್ ಮನಲೆಲ್ ಅವರ ಬೌದ್ಧಿಕ ಕೊಡುಗೆಗಳಿಂದ ಸಾಧ್ಯವಾಗಿದೆ.

ವಾಕ್ ಮತ್ತು ಶ್ರವಣ ಚಿಕಿತ್ಸೆಯು ಶ್ರವಣದೋಷವುಳ್ಳ ಮಕ್ಕಳ ಪೋಷಕರಿಂದ ಸಾಕಷ್ಟು ಸಮಯ ಮತ್ತು ಬದ್ಧತೆ ಬೇಡುತ್ತದೆ. ಅಲ್ಲದೆ, ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ ಸೂಕ್ತ ಚಿಕಿತ್ಸಕರು ಲಭ್ಯವಿಲ್ಲ. ಶ್ರವಣ ಸಾಧನಗಳ ವೆಚ್ಚವು ಸುಮಾರು 15,000 ರೂಪಾಯಿಗಳಿಂದ 2,50,000 ರೂಪಾಯಿಗಳವರೆಗೆ ಇದ್ದು, ಈ ಸಾಧನಗಳಿಗೆ ಹಾಗೂ ಪದೇ ಪದೇ  ಚಿಕಿತ್ಸಕರ ಭೇಟಿಗೆ ನಿರಂತರವಾಗಿ ಹಣ ಖರ್ಚು ಮಾಡಬೇಕಾದ್ದು, ಈ ಕುಟುಂಬಗಳ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಪ್ರಸ್ತುತ ಅಧ್ಯಯನದಲ್ಲಿ, ಸಂಶೋಧಕರು, ಕೈಗೆಟುಕುವ ದರದಲ್ಲಿ ಚಿಕಿತ್ಸೆ ಮತ್ತು ಸಂಯೋಜಿತ ಶ್ರವಣ ಸಾಧನವನ್ನು ಒಳಗೊಂಡ ಸರಳವಾದ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಇದರ ಮೂಲಮಾದರಿಯು ಕೇವಲ 5000 ರೂಪಾಯಿಗಳಿಗೆ ದೊರೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂತಹ ಮೂರನೇ ಸಾಧನವಾಗಿದೆ.

"ನಾವೀಗ ಚಿಕಿತ್ಸೆಯ ಆಪ್ ನ ಕುರಿತಾಗಿ ಶ್ರಮಿಸುತ್ತಿದ್ದೇವೆ ಮತ್ತು ಆದಷ್ಟು ಬೇಗ ಶ್ರವಣ ಸಾಧನವನ್ನು ಅಭಿವೃದ್ಧಿ ಪಡಿಸಲು ಪಾಲುದಾರಿಕೆಯ ನೆರವು ಸಿಗುತ್ತದೆ ಎಂದು ಆಶಿಸುತ್ತೇವೆ. ಈ ವರ್ಷದೊಳಗೇ ಈ ಪರಿಕಲ್ಪನೆಯ ಪ್ರಾಯೋಗಿಕ ಪರೀಕ್ಷೆಯನ್ನು ಪ್ರಾರಂಭಿಸಲು ಬೇಕಾದ ಹಣವನ್ನು ಸಂಗ್ರಹಿಸುವ ಆಶಯ ಹೊಂದಿದ್ದೇವೆ” ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಪ್ರಾಡಕ್ಟ್ ಡಿಸೈನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ನ ಉತ್ಸಾಹ್ ಪ್ರಯೋಗಾಲಯದಲ್ಲಿ ನಡೆದ ಅಧ್ಯಯನದ ಪ್ರಮುಖ ಸಂಶೋಧಕ ಡಾ. ಮನೀಶ್ ಅರೋರಾ. ಹೊಸದಾಗಿ ಅಭಿವೃದ್ಧಿಪಡಿಸಲಾದ ಸಾಧನವನ್ನು ಬ್ಲೂಟೂತ್ನ ಮೂಲಕ ಸ್ಮಾರ್ಟ್ಫೋನ್ ಅಪ್ಲಿಕೇಶನ್ಗೆ ಸಂಪರ್ಕಿಸಬಹುದು. ಈ ಅಪ್ಲಿಕೇಶನ್, ಬಹುಭಾಷಾ ಚಾತುರ್ಯ ಹೊಂದಿದ್ದು, ಪ್ರಸ್ತುತ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ನೆರವು ಒದಗಿಸುತ್ತದೆ. ಈ ಅಪ್ಲಿಕೇಶನ್ ಎರಡು ಮೋಡ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ - 'ಶ್ರವಣ ಸಾಧನ' ಮೋಡ್ ಮತ್ತು 'ಚಿಕಿತ್ಸೆ' ಮೋಡ್. 'ಶ್ರವಣ ಸಾಧನ' ಮೋಡ್ ಆಯ್ಕೆ ಮಾಡಿದರೆ, ಮಗುವಿನ ಸುತ್ತಲಿನ ವಾತಾವರಣದಲ್ಲಿನ ಧ್ವನಿಗಳನ್ನು ವರ್ಧಿಸುತ್ತದೆ ಮತ್ತು ಸಂಸ್ಕರಿಸುತ್ತದೆ ಹಾಗೂ ಇದರ ಮೂಲಕ ಮಗುವು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುತ್ತದೆ.  'ಚಿಕಿತ್ಸೆ' ಮೋಡ್ನಲ್ಲಿ, ಪೂರ್ವ-ನಿಯೋಜಿತ ಆಡಿಯೋ ಕ್ಲಿಪ್ಗಳು ಲಭ್ಯವಿರುತ್ತವೆ ಹಾಗೂ ಅವುಗಳನ್ನು ಬಳಸಿ ಮಗುವಿನ ಪೋಷಕರು ಅಥವಾ ಆರೈಕೆ ಮಾಡುವವರು ಚಿಕಿತ್ಸೆಯನ್ನು ನಡೆಸಬಹುದು.

ಈ ಆಪ್ನಲ್ಲಿ ಮಗುವಿಗೆ ಆಡಿಯೊ ಕ್ಲಿಪ್ಗಳನ್ನು ವಿತರಿಸುವ ವಿತರಣಾ ವಿಭಾಗವಿದೆ. ಜೊತೆಗೆ, ಮಗುವಿನ ಶ್ರವಣ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡುವ ‘ಮೌಲ್ಯಮಾಪನ ವಿಭಾಗ’ವೂ ಇದೆ ಮತ್ತು ಅದರ ನಂತರ ಫಲಿತಾಂಶಕ್ಕೆ ಅನುಗುಣವಾಗಿ ಮಗುವಿಗೆ ಮುಂದಿನ ಹಂತಕ್ಕೆ ಬಡ್ತಿ ನೀಡಲಾಗುತ್ತದೆ.

ಚಿಕಿತ್ಸೆಯ ಮೊದಲ ಹಂತದ ಭಾಗವಾಗಿ, ಅಡುಗೆಮನೆ ಅಥವಾ ಶಾಲಾ ತರಗತಿ ಮುಂತಾದ ವಿಭಿನ್ನ ಮೂಲಗಳಲ್ಲಿ ಹೊರಡುವ ಶಬ್ದಗಳನ್ನು ಈ ಸ್ಮಾರ್ಟ್ಫೋನ್ ಆಪ್ ನ ಮೂಲಕ ಕೇಳಿಸಲಾಗುತ್ತದೆ. ಈ ಶಬ್ದಗಳನ್ನು ಮಗುವು ಗುರುತಿಸಬೇಕು ಮತ್ತು ಅದರೊಂದಿಗಿನ ತನ್ನ ಸಂಬಂಧವನ್ನು ಸ್ಪಷ್ಟಪಡಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಎರಡನೆಯ ಹಂತದಲ್ಲಿ, ಆ ಮಗುವಿನ ಸುತ್ತಮುತ್ತಲಿನ ಶಬ್ದಗಳು ಮತ್ತು ಮನುಷ್ಯರ ಮಾತಿನ ಶಬ್ದಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಕಲಿಸಲಾಗುತ್ತದೆ. ಈ ಚಿಕಿತ್ಸೆಯಲ್ಲಿ ಪಾಲ್ಗೊಳ್ಳುವ ಮಗುವಿನ ಪೋಷಕರನ್ನು ಹುರಿದುಂಬಿಸುವ ಸಲುವಾಗಿ, ಇದೇ ಚಿಕಿತ್ಸೆಯಿಂದ ಪುನಶ್ಚೇತನಗೊಂಡ ಮಕ್ಕಳ ಯಶಸ್ಸಿನ ಕಥೆಗಳನ್ನೂ ಒಂದು ವಿಭಾಗದಲ್ಲಿ ಇರಿಸಲಾಗಿದೆ.

"ವಾಕ್ ಶ್ರವಣ ಚಿಕಿತ್ಸಕರಿಗೆ ಬದಲಿ ಎಂಬಂತೆ ಈ ಮೊಬೈಲ್ ಅಪ್ಲಿಕೇಶನ್ ರೂಪುಗೊಂಡಿದ್ದಲ್ಲ; ತಜ್ಞರ ಚಿಕಿತ್ಸೆಯ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಇದು ಸಹಾಯ ಮಾಡಲಿದೆ. ಅಂತಹ ತಜ್ಞರು ಈ ಆಪ್ ನೊಂದಿಗೆ ಕೈಜೋಡಿಸಿದರೆ, ಈ ಇಡೀ  ಪುನಶ್ಚೇತನ ಪ್ರಕ್ರಿಯೆಯಲ್ಲಿ ಕೈಗೊಳ್ಳಬೇಕಾದ ಯಾವುದೇ ತಿದ್ದುಪಡಿಗೂ ಮಾರ್ಗದರ್ಶನ ದೊರೆತಂತಾಗುತ್ತದೆ" ಎಂದು ಅವರ ಕೆಲಸದ ಹಿಂದಿನ ಪ್ರೇರಣೆ ಹಾಗೂ ಉದ್ದೇಶದ ಬಗ್ಗೆ ಡಾ. ಅರೋರಾ ವಿವರಿಸುತ್ತಾರೆ.

ಮುಂದಿನ ಹಂತವಾಗಿ, ಸಂಶೋಧಕರು, ವಿವಿಧ ಶಬ್ದಗಳನ್ನು ಗುರುತಿಸಲು ಮತ್ತು ಅಪ್ಲಿಕೇಶನ್ನಲ್ಲಿ ಆ ಶಬ್ದಗಳ ಪ್ರಸ್ತುತತೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಅವರು ಸೇರಿಸಲು ಬಯಸುವ ಮತ್ತೊಂದು ಅಂಶವೆಂದರೆ, ಪ್ರತಿ ಮಗುವಿನ ಅಗತ್ಯಕ್ಕೆ ತಕ್ಕಂತೆ  ಆಪ್ ಅನ್ನು ರೂಪಾಂತರಗೊಳಿಸಬಲ್ಲ ‘ರೆಕಾರ್ಡಿಂಗ್ ಪ್ಲಾಟ್ಫಾರ್ಮ್’; ಈ ಆಪ್ ಗೆ ಧ್ವನಿಮುದ್ರಣ ವ್ಯವಸ್ಥೆಯನ್ನು ಸೇರಿಸುವ ಮೂಲಕ, ಮಗುವಿನ ಸುತ್ತಮುತ್ತಲಿನ ಶಬ್ದಗಳನ್ನು ಪೋಷಕರು/ಅರೈಕೆ ಮಾಡುವವರು ರೆಕಾರ್ಡ್ ಮಾಡಬಹುದು ಮತ್ತು ಇದರಿಂದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ.

"ಪ್ರಸ್ತುತ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಕಾರ್ಯನಿರ್ವಹಿಸುವಂತೆ ಈ ಆಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಬಹುಭಾಷೆಯಲ್ಲಿ ಈ ಆಪ್ ನ ಬಳಕೆ ಸಾಧ್ಯಮಾಡುವ ಉದ್ದೇಶದಿಂದ ಅನೇಕ ಭಾಷೆಗಳಿಗೆ ಅನುವಾದವನ್ನು ಮಾಡಲು ಸಾರ್ವಜನಿಕರ ಸಹಾಯವನ್ನು ನಾವು ಬಯಸುತ್ತೇವೆ " ಎನ್ನುತ್ತಾರೆ ಡಾ. ಅರೋರಾ. ಸಂಶೋಧಕರು ಈ ಆಪ್ ನ ಮತ್ತಷ್ಟು ಅಭಿವೃದ್ಧಿಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಬೆಂಬಲವನ್ನು ಕೋರಿದ್ದಾರೆ.